Chintamani : ಚಿಂತಾಮಣಿ ತಾಲ್ಲೂಕಿನ ಕಾವಲುಗಾನಹಳ್ಳಿಯಲ್ಲಿ (Kavuluganahalli) ಗುರುವಾರ ಬೆಳಗ್ಗೆ ಮನೆ ಖಾಲಿ ಮಾಡುವ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಉಂಟಾದ ಘರ್ಷಣೆ ಪರಾಕಾಷ್ಠೆ ತಲುಪಿದ್ದು, ವೃದ್ಧ ದಂಪತಿಯ ಮೇಲೆ ಮಾರಣಾಂತಿಕ ಹಲ್ಲೆ (Elderly couple clash) ನಡೆಸಲಾಗಿದೆ.
ಗ್ರಾಮದ ವೆಂಕಟಮ್ಮ ಮತ್ತು ನಾರಾಯಣಸ್ವಾಮಿ ದಂಪತಿಯ ಮೇಲೆ ಆದೆಪ್ಪ ಕುಟುಂಬದವರು ಮಚ್ಚು ಮತ್ತು ಇಟ್ಟಿಗೆಗಳಿಂದ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ತೀವ್ರವಾಗಿ ಗಾಯಗೊಂಡಿರುವ ದಂಪತಿಯನ್ನು ತಕ್ಷಣವೇ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳೀಯರ ಪ್ರಕಾರ, ಈ ಜಮೀನಿನಲ್ಲಿ ವೆಂಕಟಮ್ಮ ಹಲವು ವರ್ಷಗಳಿಂದ ವಾಸವಿದ್ದು, ಅದು ಸರ್ಕಾರಿ ಜಮೀನು ಎಂದು ತಿಳಿಯಲಾಗಿದೆ. ಆದರೆ ಆದೆಪ್ಪ ಕುಟುಂಬ ಜಾಗವು ತಮದೆಂದು ಹೇಳಿ ಮನೆ ಖಾಲಿ ಮಾಡುವಂತೆ ಒತ್ತಾಯಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಹಲವಾರು ಬಾರಿ ಗಲಾಟೆ ಸಂಭವಿಸಿದ್ದರೂ, ಗುರುವಾರದ ಹಲ್ಲೆ ಘಟನೆ ಗಂಭೀರ ತಿರುವು ಪಡೆದಿದೆ.
ಹಲ್ಲೆ ನಡೆಸಿದವರಾಗಿ ಆದೆಪ್ಪ, ವೆಂಕಟೇಶ್ ಮತ್ತು ಆಂಜಪ್ಪ ಎಂಬವರ ಹೆಸರುಗಳು ಮುಂದಿರುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. “ಮನೆಗೆ ನಾವಿಬ್ಬರು ಮಾತ್ರ ಇದ್ದಾಗ ತಡರಾತ್ರಿ ಒಳನುಗ್ಗಿ ಮಚ್ಚಿನಿಂದ ಹಾಗೂ ಇಟ್ಟಿಗೆಗಳಿಂದ ಹಲ್ಲೆ ನಡೆಸಿದರು,” ಎಂದು ವೆಂಕಟಮ್ಮ ಮಾಧ್ಯಮದವರಿಗೆ ತಿಳಿಸಿದರು.
ಘಟನೆಯ ಬಳಿಕ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಪ್ರಕರಣದ ಸಂಬಂಧ ತನಿಖೆ ಮುಂದುವರೆದಿದೆ.
