Chintamani : ನಗರಸಭೆ ಜೆಡಿಎಸ್ ಸದಸ್ಯ ಅಗ್ರಹಾರ ಮುರಳಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಯತ್ನ ನಡೆದಿರುವ ಹಿನ್ನೆಲೆ (Assault) ಚಿಂತಾಮಣಿ ನಗರದಲ್ಲಿ ಭಾನುವಾರ ಮಾಜಿ ಶಾಸಕ ಎಂ.ಕೃಷ್ಣಾರೆಡ್ಡಿ (Krishna Reddy) ಪತ್ರಿಕಾಗೋಷ್ಠಿ (Press Meet) ನಡೆಸಿದರು.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಎಂ.ಕೃಷ್ಣಾರೆಡ್ಡಿ “ಈ ಘಟನೆಗೆ ಪೊಲೀಸರ ವೈಫಲ್ಯ, ನಿಷ್ಕ್ರಿಯತೆ ಕಾರಣ ನಗರದ ಅತ್ಯಂತ ಜನನಿಬಿಡ ಪ್ರದೇಶದಲ್ಲಿಯೇ ಹಲ್ಲೆ ನಡೆದಿದ್ದು ಜನರು ಭಯಭೀತರಾಗಿದ್ದಾರೆ. ಆಂಧ್ರಪ್ರದೇಶ ಮತ್ತಿತರ ಕಡೆಗಳಿಂದ ರೌಡಿಗಳು ಬರುತ್ತಿದ್ದಾರೆ. ಇದನ್ನು ಮಟ್ಟ ಹಾಕದಿದ್ದರೆ ಮುಂದೊಂದು ದಿನ ಭೀಕರ ಘಟನೆಗಳು ನಡೆಯಬಹುದು ಎಂದು ಕಳೆದ ಒಂದೂವರೆ ವರ್ಷದಿಂದ ನಗರ ಪೊಲೀಸ್ ಠಾಣೆ ಅಧಿಕಾರಿಗೆ ಪದೇ ಪದೇ ಹೇಳಿದರೂ ಅವರು ಯಾವುದೇ ಕ್ರಮಕೈಗೊಂಡಿಲ್ಲ. ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿ ಮೂರು ಜನರ ಚಿತ್ರಗಳನ್ನು ಎಸ್ಪಿ, ಗೃಹಮಂತ್ರಿಗೆ ಕಳುಹಿಸಿದ್ದೇವೆ. ಸಮಾಜಘಾತುಕ ಶಕ್ತಿಗಳು ರಾಜಾರೋಷವಾಗಿ ಪೊಲೀಸ್ ಠಾಣೆಗಳಿಗೆ ಹೋಗಿಬರುತ್ತಾರೆ. ಅಪ್ರಯೋಜಕ, ನಿಷ್ಕ್ರಿಯರಾಗಿರುವ ಅಧಿಕಾರಿಗಳನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು. ಪ್ರಾಮಾಣಿಕವಾಗಿ, ಪಾರದರ್ಶವಾಗಿ ಉತ್ತಮ ಆಡಳಿತ ನಡೆಸುವ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಗೃಹಮಂತ್ರಿ ಮತ್ತು ಮುಖ್ಯಮಂತ್ರಿಗೆ ಮನವಿ ಮಾಡುತ್ತಿದ್ದೇನೆ” ಎಂದು ಹೇಳಿದರು.
ನಾನು ಶಾಸಕನಾಗಿದ್ದ 10 ವರ್ಷಗಳಲ್ಲಿ ಇಂತಹ ಘಟನೆಗಳು ನಡೆದಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ, ಇಲ್ಲಿಯ ಶಾಸಕರು ಮಂತ್ರಿಗಳಾದ ಮೇಲೆ ಅಧಿಕಾರಿಗಳಿಗೆ ಮತ್ತಷ್ಟು ಬೆಂಬಲ ಸಿಕ್ಕಿದೆ. ರಾಜಕೀಯ ಬೆಂಬಲವೂ ಇದೆ. ಯಾರು ಯಾರ ನಿಯಂತ್ರಣದಲ್ಲೂ ಇಲ್ಲ. ರೌಡಿಗಳಿಗೆ, ಸಮಾಜಘಾತುಕ ಶಕ್ತಿಗಳಿಗೆ ಅಧಿಕಾರಿಗಳೇ ಮಹಾಪೋಷಕರಾಗಿದ್ದಾರೆ. ಇಲ್ಲಿಯ ಶಾಸಕರ ಕುಮ್ಮಕ್ಕು ಇದೆ. ಸಾಮಾನ್ಯ ಜನರಿಗೆ ರಕ್ಷಣೆ ದೊರೆಯುತ್ತಿಲ್ಲ ಎಂದು ಕೃಷ್ಣಾರೆಡ್ಡಿ ದೂರಿದರು.
ಸುದ್ಧಿಗೋಷ್ಠಿಯಯಲ್ಲಿ ನಗರಸಭೆ ಸದಸ್ಯರಾದ ದೇವಳಂ ಶಂಕರ್, ಟೊಮೆಟೊ ಗೌಸ್, ಮಾಜಿ ಸದಸ್ಯ ವೆಂಕಟರವಣಪ್ಪ, ವೆಂಕಟೇಶ್ ಮತಿತ್ತರರು ಉಪಸ್ಥಿತರಿದ್ದರು.
