Chikkaballapur : ಚಿಕ್ಕಬಳ್ಳಾಪುರ ನಗರದ 8ನೇ ವಾರ್ಡ್ನಲ್ಲಿ ಬುಧವಾರ ಶಾಸಕ ಪ್ರದೀಪ್ ಈಶ್ವರ್ (MLA Pradeep Eshwar ) ‘ನಮಸ್ತೆ ಚಿಕ್ಕಬಳ್ಳಾಪುರ’ (Namaste Chikkaballapur) ಕಾರ್ಯಕ್ರಮವನ್ನು ನಡೆಸಿದರು. ಶಾಸಕರು ವಾರ್ಡ್ಗೆ ಭೇಟಿ ನೀಡಿದ ಸಂದರ್ಭ, ಕೆಲವು ಮಹಿಳೆಯರು ವೃದ್ಧಾಪ್ಯ ವೇತನ ಮತ್ತು ಪಿಂಚಣಿಯ ಸಮಸ್ಯೆಗಳನ್ನು ಬಿಂಬಿಸಿದರು. ಕೂಡಲೇ ಅಧಿಕಾರಿಗಳನ್ನು ಕರೆಸಿ ಮಾಹಿತಿ ಪಡೆದ ಶಾಸಕರು, ತಕ್ಷಣವೇ ಕ್ರಮಕೈಗೊಳ್ಳುವಂತೆ ಸೂಚಿಸಿದರು. ಸ್ಥಳದಲ್ಲಿಯೇ ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಲಾಯಿತು.
ಕಾರ್ಯಕ್ರಮದ ವೇಳೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, “8ನೇ ವಾರ್ಡ್ನಲ್ಲಿ ಯುಜಿಡಿ ಸಮಸ್ಯೆ ಗಂಭೀರವಾಗಿದೆ. ಇದನ್ನು ಪರಿಹರಿಸಲು ಈಗಾಗಲೇ ₹30 ಕೋಟಿ ಬಿಡುಗಡೆ ಮಾಡಿಸಿದ್ದೇನೆ. ನಗರದ ಚರಂಡಿ ವ್ಯವಸ್ಥೆ ಕೂಡ ಅವೈಜ್ಞಾನಿಕವಾಗಿದ್ದು ಇದನ್ನು ಸರಿಪಡಿಸಲು ₹100 ಕೋಟಿ ಅಗತ್ಯವಿದೆ, ಈ ಬಗ್ಗೆ ಕ್ರಮವಹಿಸಿ ಹಣ ತರಲಾಗಿದೆ. ಸಮರ್ಪಕ ತಾಂತ್ರಿಕ ಮಾರ್ಗದಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಾಗುವುದು” ಎಂದು ಭರವಸೆ ನೀಡಿದರು.
ಇದೇ ವೇಳೆ, ಪಹಲ್ಗಾಮ್ (ಶ್ರೀನಗರ) ಬಳಿ ಉಗ್ರರಿಂದ ನಡೆದ ಹತ್ಯೆ ಕುರಿತು ಮಾತನಾಡಿದ ಶಾಸಕರು, “ಈ ಕಿರುಕುಳ ನೀಡುವ ನಾಚಿಕೆಹೀನ ಕೃತ್ಯಕ್ಕೆ ಕಾರಣವಾದ ಉಗ್ರರನ್ನು ಭಾರತೀಯ ಸೇನೆ ಬೆನ್ನುಹತ್ತಿ ನಾಶಮಾಡಲಿದೆ. ಘಟನೆಯಲ್ಲಿ ಕರ್ನಾಟಕದ ಮೂವರು ಹುತಾತ್ಮರಾಗಿದ್ದಾರೆ ಎಂಬುದು ವಿಷಾದಕರ,” ಎಂದರು.
ಕಾರ್ಯಕ್ರಮದಲ್ಲಿ ಪೌರಾಯುಕ್ತ ಮನ್ಸೂರ್ ಅಲಿ, ನಗರಸಭೆ ಪರಿಸರ ಎಂಜಿನಿಯರ್ ಉಮಾಶಂಕರ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
